ಬೆಳ್ತಂಗಡಿ: ಮಾಲಾಡಿ ಗ್ರಾಮದ ಕೊಲ್ಪೆದಬೈಲು ಎಂಬಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಒಡೆದು ಒಳನುಗ್ಗಿದ ಕಳ್ಳರು 14 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.
ಕೊಲ್ಪೆದ ಬೈಲು ನಿವಾಸಿ ವಸಂತಿ ಹೆಗ್ಡೆ ಎಂಬವರ ಮನೆಯಲ್ಲಿ ಕಳ್ಳತನವಾಗಿದೆ.
ಮನೆಯವರು ಎ. 20ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಬೆಳ್ತಂಗಡಿಗೆ ತೆರಳಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಮುಂದಿನ ಬಾಗಿಲಿನ ಬೀಗ ಒಡೆದಿರುವುದು ಕಂಡು ಬಂದಿದೆ. ಪರಿಶೀಲಿಸಿದಾಗ ಕಳ್ಳರು ಮನೆಯ ಕೋಣೆಯ ಕಪಾಟಿನಲ್ಲಿ ಇರಿಸಲಾಗಿದ್ದ 30,000 ಸಾವಿರ ರೂ. ನಗದು ಹಾಗೂ 160.5 ಗ್ರಾಂ. ಚಿನ್ನಾಭರಣಗಳನ್ನು ಕಳವು ಮಾಡಿರುವುದು ಕಂಡು ಬಂದಿದೆ.
ಕಳವಾಗಿರುವ ಚಿನ್ನಾಭರಣಗಳ ಒಟ್ಟು ಮೌಲ್ಯ 13,72,000 ರೂ. ಎಂದು ಅಂದಾಜಿಸಲಾಗಿದೆ. ನಗದು ಮತ್ತು ಚಿನ್ನ ಸೇರಿ ಒಟ್ಟು 14,02,000 ರೂ. ಕಳ್ಳತನವಾಗಿದೆ. ಘಟನೆಯ ಬಗ್ಗೆ ಪುಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow us on Social media