ನವದೆಹಲಿ: ದೇಶದ ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುವ ಮೂಲಕ ಚೀನಾಗೆ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.
ಸರ್ವಪಕ್ಷ ಸಭೆಯ ಬಳಿಕ ದೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನಮ್ಮ ದೇಶದ ಸೈನಿಕರ ಮೇಲೆ ನಂಬಿಕೆಯಿದೆ. ಯಾವುದೇ ಪ್ರತಿರೋಧವನ್ನು ಎದುರಿಸುವ ಶಕ್ತಿ ನಮ್ಮ ಸೈನಿಕರಿಗೆ ಇದೆ. ಸೇನೆಯ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದೇವೆ ಎಂದು ತಿಳಿಸಿದರು.
ಗಡಿಯಲ್ಲಿ ಈಗ ಮೂಲಸೌಕರ್ಯಗಳನ್ನು ನಿರ್ಮಿಸಲಾಗುತ್ತದೆ. ರಾಷ್ಟ್ರ ಹಿತ, ದೇಶವಾಸಿಗಳ ಹಿತವೇ ನಮಗೆ ಮುಖ್ಯ. ಭಾರತ ಶಾಂತಿ ಮತ್ತು ಸ್ನೇಹವನ್ನು ಚಾಚುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನಮಗೆ ದೇಶದ ಸಾರ್ವಭೌಮತೆಯೇ ಮುಖ್ಯ. ಸೇನೆಗೆ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಗಳು, ಕ್ಷಿಪಣಿಗಳು ಸೇರಿವೆ. ಭೂ, ವಾಯು, ನೌಕಾ ದಳಗಳು ಯಾವುದೇ ದಾಳಿಯನ್ನು ಎದುರಿಸಲು ನಾವು ಸಮರ್ಥವಾಗಿದ್ದೇವೆ ಎಂದು ತಿಳಿಸಿದರು.
ಎಲ್ಎಸಿ ಬಳಿ ಸೇನೆಯ ಗಸ್ತು ಹೆಚ್ಚಿಸಲಾಗಿದೆ. ನಮ್ಮ ದೇಶ ಸುಭದ್ರವಾಗಿದ್ದು ಯಾರು ಭಯ ಪಡಬೇಕಾದ ಅಗತ್ಯವಿಲ್ಲ. ರಾಷ್ಟ್ರೀಯ ಸುರಕ್ಷತೆಯೇ ನಮ್ಮ ಆಧ್ಯತೆಯಾಗಿದೆ ಎಂದು ನಾನು ಆಶ್ವಾಸನೆ ನೀಡುತ್ತಿದ್ದೇನೆ ಎಂದು ಮೋದಿ ತಿಳಿಸಿದರು.
ಚೀನಿಯರಿಗೆ ಪಾಠ:
ಭಾರತದ ಗಡಿಯ ಒಳಗಡೆ ಚೀನಾದವರು ಬಂದಿಲ್ಲ. ಭಾರತ ಮಾತೆಯನ್ನು ಎದುರು ಹಾಕಿದವರಿಗೆ ನಮ್ಮ ಸೈನಿಕರು ಪಾಠ ಕಲಿಸಿ ಬಲಿದಾನ ಮಾಡಿದ್ದಾರೆ. ನಮ್ಮ ಸೈನಿಕರು ಏನು ಮಾಡಬೇಕೋ ಅದನ್ನು ಸರಿಯಾಗಿ ಮಾಡುತ್ತಿದ್ದಾರೆ. ಕ್ರಿಯೆ ತಕ್ಕ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ಮೋದಿ ಸರ್ವ ಪಕ್ಷ ಸಭೆಯಲ್ಲಿ ತಿಳಿಸಿದ್ದಾರೆ.
ಆರ್ಜೆಡಿ ಮತ್ತು ಆಪ್ ಹೊರತು ಪಡಿಸಿ ಎಲ್ಲಾ ಪಕ್ಷಗಳ ನಾಯಕರು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿದ್ದರು. ಈ ವೇಳೆ, ಪಕ್ಷಗಳ ನಾಯಕರಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮತ್ತು ವಿದೇಶಾಂಗ ಸಚಿವ ಜೈಶಂಕರ್ ವಿವರಣೆ ನೀಡಿದರು. ಬಳಿಕ ಎಲ್ಲಾ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯ ಮಂಡಿಸಿದ್ರು. ಗಡಿ ವಿಚಾರವಾಗಿ ಬಹುತೇಕ ನಾಯಕರು ಸರ್ಕಾರಕ್ಕೆ ವಿಶ್ವಾಸ ತುಂಬಿದ್ದಾರೆ. ಭಾರತದ ಸರ್ವಪಕ್ಷ ಸಭೆ ಬೆನ್ನಲ್ಲೇ ಮಾಡೋದನ್ನೆಲ್ಲಾ ಮಾಡಿರುವ ಚೀನಾ ಈಗ ಶಾಂತಿ ಮಂತ್ರ ಜಪಿಸುತ್ತಿದೆ. ಪರಿಸ್ಥಿತಿ ಬಿಗಡಾಯಿಸೋದು ಬೇಡ. ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆ ಆಗಬಹುದು ಎಂದು ಹೇಳಿದೆ.
ಮೋದಿ ಭಾಷಣದ ಆರಂಭದಲ್ಲಿ ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಭಾನುವಾರ ಎಲ್ಲರೂ ಮನೆಯಲ್ಲೇ ಕುಟುಂಬದವರ ಜೊತೆ ಯೋಗ ಮಾಡಿ. ಕೊರೊನಾ ವಿರುದ್ಧ ಹೋರಾಡಲು ದೇಹದಲ್ಲಿ ರೋಗ ನಿರೋಧಕ ಶಕ್ತಿ ಬೇಕಾಗುತ್ತದೆ. ಯೋಗದಿಂದ ರೋಗ ನಿರೋಧಕ ಶಕ್ತಿ ಬರುತ್ತದೆ ಎಂದು ತಿಳಿಸಿದರು.
Follow us on Social media